Wednesday, August 10, 2011

ಮುಗ್ಧ ಅನಿಸಿಕೆ

ಊರು ಕೇರಿಗಳ ಉರಿಯ ಬಿಸಿಲಿನಲಿ
ಬರಿಯ ಕಾಲಿನಲಿ ದಿನವೂ ಅಲೆದಾಡಿ
ಎಂಜಿಲು ಸಿಗದೆ ಗಂಟಲು ಒಣಗಿ
ದೇಹವೆ ಸುಟ್ಟು ಕರಕಲು ಆಗಿ
ತ್ರಾಸದಿ ಇರಲು ಮೋಡವು ಕರಗಿ
ಮಳೆ ಸುರಿದು ಬಾಯಿಗೆ ನೀರು ಹರಿದ ಹಾಗೆ

ಅನಿಸಿತು ಆ ಮೊದಲ ಚುಂಬನ

ಮಂಜಿನ ಗಡ್ಡೆಯ ಬೆಟ್ಟದ ತುದಿಯ
ಪಾದರಸವನೂ ಜಡವಾಗಿಸುವ ಚಳಿಯ
ಬಟ್ಟೆಯೇ ಇಲ್ಲದೆ ದಾರಿಯೇ ಕಾಣದೆ
ರಕ್ತ ಬೆವರುಗಳೇ ಹೆಪ್ಪಾಗಿ ಹರಿಯದೆ
ಕಣ್ಣಿನ ನೀರು ಕೆನ್ನೆಯ ಕೆಳಗಿಳಿಯದೆ ನಡುಗುವಾಗ
ಮಿಂಚು ಬಡಿದು ಬೆಂಕಿ ಹಿಡಿದು ಚಳಿಯನೋಡಿಸಿ ಉರಿದ ಹಾಗೆ

ಅನಿಸಿತು ಆ ಮೊದಲ ಆಲಿಂಗನ

ಮನೆಯಿರದೆ ಇರಲು ನೆಲೆಯಿರದೆ
ಉಡಲು ಉಡುಪಿರದೆ ತಿನ್ನಲು ಕೂಳಿರದೆ
ರಸ್ತೆಯ ದಾಸಯ್ಯ ಮಾಡಲು ಸಂಪಾದನೆಯೇ ಇರದೆ
ಮಲಗಲು ಹಾಸಿರದೆ ಕಾಣಲು ಕನಸಿರದೆ
ಇನ್ನೇನು ಹೆಣವಾಗಿ ಮಣ್ಣಾಗುವಾಗ
ಅರಮನೆ ಹೊಕ್ಕು ಮಹಾ ರಾಜನಾದ ಹಾಗೆ

ಆಯಿತು ನಿನ್ನೊಳಗೆ ನನ್ನ ಆಗಮನ

No comments: